ನಮ್ಮ ಬಗ್ಗೆ
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ(ಬೆವಿಕಂ)ವು ಕರ್ನಾಟಕ ರಾಜ್ಯದ ೮ ಜಿಲ್ಲೆಗಳಲ್ಲಿ(ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ) ಸುಮಾರು 41,092 ಚದರ ಕಿಲೋ ಮೀಟರ್ ವ್ಯಾಪ್ತಿಯ 207 ಲಕ್ಷ ಜನಸಂಖ್ಯೆಯ ಪ್ರದೇಶಕ್ಕೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ.
ಬೆಂಗಳೂರು ಮಹಾನಗರ ವಲಯ(ಉತ್ತರ), ಬೆಂಗಳೂರು ಮಹಾನಗರ ವಲಯ(ದಕ್ಷಿಣ), ಬೆಂಗಳೂರು ಗ್ರಾಮೀಣ ಪ್ರದೇಶ ವಲಯ ಮತ್ತು ಚಿತ್ರದುರ್ಗ ವಲಯ – ಕಂಪನಿ ನಾಲ್ಕು ಕಾರ್ಯ ವಲಯಗಳನ್ನು ಹೊಂದಿದೆ.
1999 ರಲ್ಲಿ, ಕರ್ನಾಟಕ ವಿದ್ಯುತ್ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಯಲ್ಲಿ ತೊಡಗಿತು. ಮೊದಲ ಹೆಜ್ಜೆ, ಕರ್ನಾಟಕ ವಿದ್ಯುತ್ ಮಂಡಳಿ (ಕೆಇಬಿ) ವಿಸರ್ಜನೆಯಾಗಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮೈದಳೆಯಿತು. ಈ ನವೆಂಬರ್ ೧೯೯೯ ರಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆ ಇ ಆರ್ ಸಿ ) ರೂಪುಗೊಂಡಿತು.
ಈ ಸುಧಾರಣೆ ಪ್ರಕ್ರಿಯೆಯ ಮುಂದಿನ ಹಂತದಲ್ಲಿ, ಕೆಪಿಟಿಸಿಎಲ್ ನಿರ್ವಹಿಸುವ ಪ್ರಸರಣ ಮತ್ತು ವಿತರಣೆ ವ್ಯವಹಾರ ಜೂನ್ ೨೦೦೨ ರಲ್ಲಿ ಪ್ರತ್ಯೇಕಗೊಂಡಿತು. ನಾಲ್ಕು ಹೊಸ ವಿತರಣಾ ಕಂಪನಿಗಳು ಕರ್ನಾಟಕಕ್ಕೆ ವಿದ್ಯುತ್ ವಿತರಿಸಲು ರೂಪುಗೊಂಡವು..
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆ ವಿ ಕಂ ) ೮ ಜಿಲ್ಲೆಗಳಲ್ಲಿ ಕೆಪಿಟಿಸಿಎಲ್ ನಿಂದ ವಿದ್ಯುತ್ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ ಮತ್ತು ಜೂನ್ ೧, ೨೦೦೨ ರಿಂದ ತನ್ನ ಕಾರ್ಯಾಚರಣೆಗಳನ್ನು ಆರಂಭಗೊಂಡಿದೆ.
ಬೆ ವಿ ಕಂ ಇತಿಹಾಸ
ಹಿಂದಿನ ಮೈಸೂರು ರಾಜ್ಯವು 1902ರಲ್ಲಿ ವಾಣಿಜ್ಯಾತ್ಮಕ ಕಾರ್ಯಾಚರಣೆಗಾಗಿ, ಶಿವನಸಮುದ್ರದಲ್ಲಿ ಮೊಟ್ಟ ಮೊದಲ ಬೃಹತ್ ಜಲ ವಿದ್ಯುತ್ ಯೋಜನೆಯನ್ನು ಸ್ಥಾಪಿಸಿದ ಹೆಮ್ಮೆ ಹಾಗೂ ಖ್ಯಾತಿಯನ್ನು ಪಡೆದಿದೆ. ಮುಂದುವರೆದ ದೇಶಗಳನ್ನೂ ಒಳಗೊಂಡಂತೆ, ವಿಶ್ವದಾದ್ಯಂತ ಈ ಕಾರ್ಯಚತುರತೆಯು ಇನ್ನೂ ಆರಂಭಿಕ ದಶೆಯಲ್ಲಿತ್ತು. ಕೋಲಾರ ಚಿನ್ನದ ಗಣಿಯಲ್ಲಿ ಗಣಿ ಕಾರ್ಯಾಚರಣೆಯ ನಿಮಿತ್ತ ವಿದ್ಯುತ್ ಪೂರೈಸುವ ಸಲುವಾಗಿ ಶಿವನಸಮುದ್ರದಿಂದ ಕೆ.ಜಿ.ಎಫ್.ವರೆಗೆ ಅಧಿಕ ವೋಲ್ಟೇಜಿನಲ್ಲಿ ವಿಶ್ವದಲ್ಲೇ ದೀರ್ಘ ಉದ್ದಳತೆಯ ಪ್ರಸರಣ ಮಾರ್ಗವನ್ನು ನಿರ್ಮಿಸಲಾಯಿತು.
ಶಿವನಸಮುದ್ರ ಕೇಂದ್ರದ ವಿದ್ಯುತ್ ಉತ್ಪಾದನಾ ಸಾಮಥ್ರ್ಯವನ್ನು ಹಂತಹಂತವಾಗಿ 42ಮೆಗಾವಾಟ್ಗೆ ಹೆಚ್ಚಿಸಲಾಯಿತು. ಅಧಿಕಗೊಂಡ ವಿದ್ಯುತ್ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ, 1940ರಲ್ಲಿ 17.2 ಮೆಗಾ ವಾಟ್ ಸಾಮರ್ಥ್ಯದ ಶಿಂಶಾ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಕೈಗಾರಿಕೆ, ಗ್ರಾಮೀಣ ಪ್ರದೇಶಗಳ ವಿದ್ಯುದೀಕರಣ ಇವುಗಳಿಂದಾಗಿ ವಿದ್ಯುತ್ ಬೇಡಿಕೆಯು ಹೆಚ್ಚುತ್ತಲೇ ಇದ್ದುದರಿಂದ, ಉತ್ಪಾದನಾ ಸಾಮರ್ಥ್ಯವನ್ನೂ ಸಹ ಹೆಚ್ಚಿಸುವುದು ಅನಿವಾರ್ಯವಾಯಿತು. ಮಹಾತ್ಮಾ ಗಾಂಧಿ ಜಲ ವಿದ್ಯುತ್ ಯೋಜನೆಯ ಮೊದಲ ಹಂತವಾಗಿ 1948ರಲ್ಲಿ 48ಮೆಗಾ ವಾಟ್ ಹಾಗೂ ಎರಡನೆಯ ಹಂತವಾಗಿ 1965ರಲ್ಲಿ 72 ಮೆಗಾ ವಾಟ್ ಸಾಮರ್ಥ್ಯದ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.
ಕಡಿಮೆ ದರದ ವಿದ್ಯುತ್ ಲಭ್ಯತೆ ಹಾಗೂ ಇತರ ಮೂಲ ಸೌಕರ್ಯಗಳನ್ನೊಳಗೊಂಡ ಕರ್ನಾಟಕ ರಾಜ್ಯವು ಕೈಗಾರಿಕಾ ಚಟುವಟಿಕೆಗಳು ಪ್ರಗತಿ ಹೊಂದುವುದಕ್ಕೆ ನೆರವಾಯಿತು. ಇಡೀ ಶರಾವತಿ ಕಣಿವೆಯನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಅವಶ್ಯಕತೆ ಉಂಟಾಯಿತು. 1964ರಲ್ಲಿ 89.1ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ಅನುಷ್ಠಾನಗೊಳಿಸಿ 1977ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಯಿತು.
60ರ ದಶಕದ ಮಧ್ಯಭಾಗ ಹಾಗೂ ತದನಂತರದಿಂದ, ರಾಜ್ಯದಲ್ಲಿ ಹಲವಾರು ಸಾರ್ವಜನಿಕ ಕ್ಷೇತ್ರ ಹಾಗೂ ಖಾಸಗಿ ಕೈಗಾರಿಕೋದ್ಯಮಗಳು ಪ್ರಾರಂಭಗೊಂಡ ಪ್ರಯುಕ್ತ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಾ ಹೋಯಿತು. ರಾಜ್ಯದ ವಿದ್ಯುತ್ ಉತ್ಪಾದನೆಯು ಮುಂಗಾರು ಮಳೆಯನ್ನೇ ಅವಲಂಬಿಸಿದ್ದರಿಂದ, ರಾಜ್ಯ ಸರ್ಕಾರವು ರಾಯಚೂರಿನಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಸ್ಥಾಪಿಸಿತು. ಪ್ರಸ್ತುತ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 1260ಮೆಗಾವಾಟ್. ರಾಜ್ಯದ ವಿದ್ಯುತ್ ಸಂಪನ್ಮೂಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ, 4,112ಎಂ.ಕೆ.ಡಬ್ಲ್ಯು.ಎಚ್. ವಿದ್ಯುತ್ ಸಾಮರ್ಥ್ಯದ, ಕಾಳಿನದಿ ಯೋಜನೆಯ ಮೂಲಕ ನಾಗಝರಿ ಪವರ್ ಹೌಸ್ನಲ್ಲಿ 810 ಮೆಗಾವಾಟ್ ಹಾಗೂ ಸೂಪಾ ಅಣೆಕಟ್ಟು ಯೋಜನೆಯಲ್ಲಿ 100ಮೆಗಾವಾಟ್ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.
1957ರವರೆಗೆ ರಾಜ್ಯದ ವಿದ್ಯುತ್ ಪ್ರಸರಣ ಹಾಗೂ ವಿತರಣೆಯ ಜವಾಬ್ದಾರಿಯು ಕರ್ನಾಟಕ ರಾಜ್ಯದ(ಹಿಂದಿನ ಮೈಸೂರು ರಾಜ್ಯ) ನಿಯಂತ್ರಣದಲ್ಲಿ ಇತ್ತು. 1957ರಲ್ಲಿ ಮೈಸೂರು ರಾಜ್ಯ ವಿದ್ಯುಚ್ಛ್ಚಕ್ತಿ ಮಂಡಲಿಯು ರಚನೆಗೊಂಡು, ಖಾಸಗಿ ವಿತರಣ ಕಂಪನಿಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿಯೊಂದಿಗೆ ವಿಲೀನಗೊಳಿಸಲಾಯಿತು.
1986ರವರೆಗೆ, ಕವಿಮಂಡಲಿಯು ಲಾಭದಾಯಕ ಸಂಸ್ಥೆಯಾಗಿತ್ತು. ಆದರೆ ತದನಂತರದಲ್ಲಿ, ದೇಶದ ಇತರ ರಾಜ್ಯಗಳ ವಿದ್ಯುತ್ ಮಂಡಲಿಗಳಂತೆ, ಕವಿಮಂಡಲಿಯೂ ಸಹ ನಷ್ಟದ ಸಂಸ್ಥೆಯಾಗತೊಡಗಿತು. ಇದಕ್ಕೆ ಕಾರಣ ಅಧಿಕಗೊಳ್ಳತೊಡಗಿದ ಕೃಷಿ ಕ್ಷೇತ್ರದ ವಿದ್ಯುತ್ ಬಳಕೆ ಹಾಗೂ ಸರ್ಕಾರದ ಸಮಾಜೋ ಆರ್ಥಿಕ ನೀತಿಗಳ ಅನುಷ್ಠಾನ.
ವಿದ್ಯುತ್ ಕ್ಷೇತ್ರದ ಕಾರ್ಯಾಚರಣೆಯನ್ನು ಉತ್ತಮಪಡಿಸಲು ಹಾಗೂ ಭಾರತ ಸರ್ಕಾರದ ಸುಧಾರಣಾ ಪ್ರಕ್ರಿಯೆಗಳಿಗೆ ಸ್ಪಂದಿಸುವ ಸಲುವಾಗಿ ಕರ್ನಾಟಕ ಸರ್ಕಾರವು ವಿದ್ಯುತ್ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣಾ ಪ್ರಸ್ತಾವನೆಯನ್ನು ಹೊರತಂದಿತು. ಪರಿಣಾಮವಾಗಿ, ಕರ್ನಾಟಕ ಶಾಸಕಾಂಗ ಸಭೆಯು ಅನುಮೋದಿಸಿದ ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣಾ ಕಾಯಿದೆಯು ಜಾರಿಗೆ ಬಂದಿತು. ಈ ಸುಧಾರಣೆಯು ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿಯನ್ನು ನಿಗಮೀಕರಣಗೊಳಿಸಿ ಬೃಹತ್ ಪ್ರಮಾಣದ ಪುನಾರಚನೆಯನ್ನು ಮಾಡುವುದಕ್ಕೆ ಅನುವು ಮಾಡಿಕೊಟ್ಟಿತು. ನಿಗಮೀಕರಣದ ಪ್ರಯುಕ್ತ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿಯು ವಿಸರ್ಜಿತಗೊಂಡು, ಆಗಸ್ಟ್ 1, 1999ರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವೆಂದು ರಚನೆಯಾಯಿತು.
ಸುಧಾರಣಾ ಪ್ರಕ್ರಿಯೆಯ ಅಂಗವಾಗಿ, ವಿತರಣಾ ಕ್ಷೇತ್ರವನ್ನು 4 ಕಂಪನಿಗಳಾಗಿ ವಿಭಜಿಸಲಾಯಿತು. ಅಂದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಬೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಹೆಸ್ಕಾಂ), ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮೆಸ್ಕಾಂ) ಮತ್ತು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ). ಈ ಕಂಪನಿಗಳು ಜೂನ್ 1, 2002ರಿಂದ ಅಸ್ತಿತ್ವಕ್ಕೆ ಬಂದವು.